ಇಟಲಿಯಲ್ಲಿ ಮಣಿರತ್ನಂ ಪುತ್ರನಿಂದ ಹಣ ದೋಚಿದ ದುಷ್ಕರ್ಮಿಗಳು
ಟ್ವಿಟ್ಟರ್ ನಲ್ಲಿ ಸಹಾಯ ಕೋರಿದ ಸುಹಾಸಿನಿಗೆ ಸಿಕ್ಕ ಪ್ರತಿಕ್ರಿಯೆಗಳು ಹೀಗಿತ್ತು
ಹೊಸದಿಲ್ಲಿ, ಆ.28: ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಂ ಹಾಗೂ ನಟಿ ಸುಹಾಸಿನಿ ದಂಪತಿಯ ಪುತ್ರ ನಂದನ್ ರಿಂದ ದುಷ್ಕರ್ಮಿಗಳು ಹಣ ದೋಚಿದ ಘಟನೆ ಇಟಲಿಯ ಬೆಲ್ಲುನೋದಲ್ಲಿ ನಡೆದಿದೆ.
ಈ ಬಗ್ಗೆ ಸುಹಾಸಿನಿ ಟ್ವೀಟ್ ಮಾಡಿದ್ದು, “ಯಾರಾದರೂ ವೆನಿಸ್ ವಿಮಾನ ನಿಲ್ದಾಣದ ಸಮೀಪವಿದ್ದೀರಾ?, ನಮ್ಮ ಪುತ್ರನನ್ನು ಬೆಲ್ಲುನೊದಲ್ಲಿ ದುಷ್ಕರ್ಮಿಗಳು ದೋಚಿದ್ದಾರೆ. ಅವನು ವಿಮಾನ ನಿಲ್ದಾಣವನ್ನು ತಲುಪಬೇಕಾಗಿದ್ದು, ಸಹಾಯ ಮಾಡಿ” ಎಂದಿದ್ದರು.
ನಂದನ್ ಇರುವ ಲೊಕೇಶನ್ ಅನ್ನು ಕೂಡ ಅವರು ಟ್ವೀಟ್ ಮಾಡಿದ್ದು, ಸಹಾಯ ಮಾಡುವವರು ಆತನಿಗೆ ಕರೆ ಮಾಡಬಹುದು ಎಂದಿದ್ದರು. ಆದರೆ ಕೆಲ ಕಿಡಿಗೇಡಿಗಳು ಮೋಜಿಗಾಗಿ ನಂದನ್ ಗೆ ಕರೆ ಮಾಡಿದ್ದರಿಂದ ಅವರು ಈ ಟ್ವೀಟ್ ಗಳನ್ನು ಡಿಲಿಟ್ ಮಾಡಿದ್ದರು. ಈಗಾಗಲೇ ತೊಂದರೆಯಲ್ಲಿರುವವರಿಗೆ ಮತ್ತೆ ತೊಂದರೆ ನೀಡಬೇಡಿ ಎಂದು ಅವರು ಈ ಬಗ್ಗೆ ಟ್ವೀಟ್ ಮಾಡಿದ್ದರು,
ಕೆಲ ಹೊತ್ತಿನ ನಂತರ ನಂದನ್ ಗೆ ಯಾರೋ ಸಹಾಯ ಮಾಡಿದ್ದು, ಆತ ಹೋಟೆಲ್ ಗೆ ತೆರಳಿದ್ದಾನೆ ಎನ್ನಲಾಗಿದೆ. ಸಹಾಯ ಮಾಡಿದವರಿಗೆ ಸುಹಾಸಿನಿ ಮತ್ತೊಂದು ಟ್ವೀಟ್ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.