ಇಬ್ಬರು ಗೆಳೆಯರ ಬದುಕು ಕಸಿದ ಪೆಲೆಟ್ ಗುಂಡು
ಮೆಹಬೂಬ ಮುಫ್ತಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ರಹ್ಮೂ ಗ್ರಾಮದ ಜಹೂರ್ ಅಹ್ಮದ್ ದಾರ್ (19) ಎಂಬ ವಿದ್ಯಾರ್ಥಿಗೆ ಅಪಾರ ನಿರೀಕ್ಷೆ ಇತ್ತು. ಅಧಿಕ ಬಲಪ್ರಯೋಗ ಹಾಗೂ ದುರ್ಬಳಕೆಗೆ ಕಡಿವಾಣ ಹಾಕುತ್ತಾರೆ ಎಂದು ಆತ ನಂಬಿದ್ದ. ಆದರೆ ಆರೇ ತಿಂಗಳಲ್ಲಿ ಈ ಯುವಕ ಹಾಗೂ ಸ್ನೇಹಿತರು ಪೆಲೆಟ್ ಬಂದೂಕಿನಿಂದ ಜೀವನಾಧಾರ ಕಳೆದುಕೊಂಡ ಸಾವಿರಾರು ಸಂತ್ರಸ್ತರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಗ್ರಾಮಗಳಲ್ಲಿ ಒಂದು ಸುತ್ತು ಹೊಡೆದು ಸ್ಥಳೀಯರ ಜತೆ ಮುಕ್ತವಾಗಿ ಮಾತನಾಡಿದರೆ, ಪ್ರತಿಭಟನೆ ಹತ್ತಿಕ್ಕುವ ಸಲುವಾಗಿ ಪಿಡಿಪಿ ಸರಕಾರ ಹೆಚ್ಚಿನ ಬಲಪ್ರಯೋಗ ಮಾಡುತ್ತಿದ್ದು, ಹಿಂದಿನ ನ್ಯಾಶನಲ್ ಕಾನ್ಫರೆನ್ಸ್ ಸರಕಾರಕ್ಕಿಂತ ಭಿನ್ನವೇನೂ ಅಲ್ಲ ಎಂಬ ಒಂದಂಶವಂತೂ ಸ್ಪಷ್ಟವಾಗುತ್ತದೆ.
ಮೆಹಬೂಬ ಮುಫ್ತಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ರಹ್ಮೂ ಗ್ರಾಮದ ಜಹೂರ್ ಅಹ್ಮದ್ ದಾರ್ (19) ಎಂಬ ವಿದ್ಯಾರ್ಥಿಗೆ ಅಪಾರ ನಿರೀಕ್ಷೆ ಇತ್ತು. ಅಧಿಕ ಬಲಪ್ರಯೋಗ ಹಾಗೂ ದುರ್ಬಳಕೆಗೆ ಕಡಿವಾಣ ಹಾಕುತ್ತಾರೆ ಎಂದು ಆತ ನಂಬಿದ್ದ. ಆದರೆ ಆರೇ ತಿಂಗಳಲ್ಲಿ ಈ ಯುವಕ ಹಾಗೂ ಸ್ನೇಹಿತರು ಪೆಲೆಟ್ ಬಂದೂಕಿನಿಂದ ಜೀವನಾಧಾರ ಕಳೆದುಕೊಂಡ ಸಾವಿರಾರು ಸಂತ್ರಸ್ತರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
2016ರ ಅಕ್ಟೋಬರ್ 31ರಂದು ಬುರ್ಹಾನ್ ವಾನಿ ಎನ್ಕೌಂಟರ್ ಬಳಿಕ ಇಡೀ ಕಣಿವೆಯಲ್ಲಿ ಹಿಂಸಾಚಾರ ಭುಗಿಲೆದ್ದಿತು. ಆದರೆ ಜಹೂರ್ ಮಾತ್ರ ಗೃಹನಿರ್ಮಾಣಕ್ಕೆ ಇಟ್ಟಿಗೆ ಲೆಕ್ಕ ಹಾಕುವ ತಂದೆಯ ಕಾಯಕದಲ್ಲಿ ಮಾಮೂಲಿನಂತೆ ನೆರವಾಗುತ್ತಿದ್ದ.
ರಾಷ್ಟ್ರೀಯ ರೈಫಲ್ಸ್ನ ಒಂದು ತುಕಡಿ ಆ ಪ್ರದೇಶದ ಮೂಲಕ ಹಾದುಹೋಗುತ್ತಿತ್ತು. ಪೂರ್ಣ ಪ್ರಮಾಣದ ಪ್ರತಿಭಟನೆಯಲ್ಲಿ ನಿರತವಾಗಿದ್ದ ಸ್ಥಳೀಯ ಯುವಕರ ಗುಂಪಿನ ಜತೆ ಸಂಘರ್ಷ ಏರ್ಪಟ್ಟಿತು. ಕಾಶ್ಮೀರ ಕಣಿವೆಯ ಸಹಜ ರೂಢಿಯಂತೆ ಸಿಆರ್ಪಿಎಫ್ನ ದೊಡ್ಡ ತುಕಡಿ, ಜಮ್ಮು ಕಾಶ್ಮೀರ ಪೊಲೀಸ್ ಪಡೆ, ವಿಶೇಷ ಕಾರ್ಯಾಚರಣೆ ಗುಂಪಿನೊಂದಿಗೆ ಸ್ಥಳಕ್ಕೆ ಆಗಮಿಸಿತು. ಇದು ಕಲ್ಲುತೂರಾಟಕ್ಕೆ ಕಾರಣವಾಯಿತು.
‘‘ಸೈನಿಕರು ಜನರನ್ನು ಹೊಡೆಯಲು ಆರಂಭಿಸಿದರು. ನಮ್ಮ ಮಸೀದಿಯ ಗಾಜುಗಳನ್ನು ಒಡೆದುಹಾಕಿದರು. ಇಂಥ ದಬ್ಬಾಳಿಕೆಯನ್ನು ಯಾರು ತಾನೆ ಸಹಿಸಿಕೊಳ್ಳಲು ಸಾಧ್ಯ? ಜನ ಇದನ್ನು ಸಹಿಸದೆ ಸೇನೆಯ ಯೋಧರ ಮೇಲೆ ಕಲ್ಲೆಸೆಯಲು ಆರಂಭಿಸಿದರು. ಇದರಿಂದ ಸೇನೆ ಮತ್ತಷ್ಟು ಭದ್ರತಾ ಸಿಬ್ಬಂದಿಯನ್ನು ನೆರವಿಗಾಗಿ ಕರೆಸಿಕೊಂಡಿತು’’ ಎಂದು ಜಹೂರ್ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.
ತಂದೆ ಹಾಗೂ ಮೂವರು ಸಹೋದರರ ಜತೆ ಜಹೂರ್ ವಾಸವಿದ್ದ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲೂ ಕಲ್ಲುತೂರಾಟ ಮುಂದುವರಿದಿತ್ತು. ಪ್ರತಿಭಟನೆಯ ಕಾವು ತೀವ್ರಗೊಂಡಾಗ, ಹೊರಗೆ ಏನು ನಡೆಯುತ್ತಿದೆ ಎಂದು ನೋಡುವ ಕುತೂಹಲದಿಂದ ಗೇಟಿನಿಂದ ಹೊರಬಂದರು. ಆದರೆ ಅದು ದೊಡ್ಡ ಪ್ರಮಾದವಾಗಿ ಪರಿಣಮಿಸಿತು. ರಭಸದಿಂದ ಬಂದ ಪೆಲೆಟ್ ಗುಂಡು ಆ ಯುವಕನ ಎದೆ ಹಾಗೂ ಮುಖವನ್ನು ಛೇದಿಸಿತು.
ತಕ್ಷಣ ಪುಲ್ವಾಮಾದ ಜಿಲ್ಲಾ ಆಸ್ಪತ್ರೆಗೆ, ಅಲ್ಲಿಂದ ಶ್ರೀನಗರದ ಎಸ್ಎಂಎಚ್ಎಸ್ ಆಸ್ಪತ್ರೆಗೆ ಆತನನ್ನು ಕರೆದೊಯ್ಯಲಾಯಿತು. ಪ್ರಜ್ಞೆ ಮರುಕಳಿಸಿದಾಗ ಎದೆ ಹಾಗೂ ಹಣೆಯಲ್ಲಿ ರಕ್ತ ಸೋರುತ್ತಿದ್ದುದಷ್ಟೇ ಆತನ ಗಮನಕ್ಕೆ ಬಂದಿತು. ಮೇಲಿಂದ ಮೇಲೆ ಆರು ಶಸ್ತ್ರಚಿಕಿತ್ಸೆಗಳನ್ನು ವೈದ್ಯರು ನಡೆಸಿದರು. ಇಷ್ಟಾಗಿಯೂ ಬಲಗಣ್ಣಿನ ದೃಷ್ಟಿಯನ್ನಷ್ಟೇ ಮರಳಿ ಪಡೆಯಲು ಸಾಧ್ಯವಾಯಿತು. ಆದರೆ ಎಡಗಣ್ಣು ಸಂಪೂರ್ಣ ಕುರುಡಾಯಿತು.
‘‘ಇದು ಭಯಾನಕ ಅನುಭವ. ಪ್ರಮುಖ ಅವಯವಗಳಲ್ಲಿ ಲೋಹದ ಪೆಲೆಟ್ ಗುಂಡು ನೆಟ್ಟಾಗ ಎಷ್ಟು ನೋವಾಗುತ್ತದೆ ಎನ್ನುವುದು ಅನುಭವಿಸಿದವರಿಗಷ್ಟೇ ಗೊತ್ತು’’ ಎಂದು ಜಹೂರ್ ನೆನಪಿಸಿಕೊಳ್ಳುತ್ತಾರೆ.
ತಂದೆ ಮುಹಮ್ಮದ್ ಸುಲ್ತಾನ್ ದಾರ್ (50) ವೃತ್ತಿಯಲ್ಲಿ ಕೃಷಿಕ. ಮಗ ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಮುಂದೆ ಬರಬೇಕು ಎಂಬ ಕನಸು ಕಂಡಿದ್ದರು. ಮಗನ ಶಿಕ್ಷಣಕ್ಕಾಗಿ ತಮ್ಮ ಜೀವಮಾನದ ಗಳಿಕೆಯನ್ನೆಲ್ಲ ಉಳಿತಾಯ ಮಾಡಿದ್ದರು. ಆದರೆ ಪೆಲೆಟ್ ಗುಂಡು ತಲುಗಿದ ಬಳಿಕ ಮಗನ ಚಿಕಿತ್ಸೆಗಾಗಿ ಎಲ್ಲ ಹಣವನ್ನೂ ವ್ಯಯಿಸಬೇಕಾಯಿತು.
‘‘ಮಗನ ಚಿಕಿತ್ಸೆಗಾಗಿ ನಾನು ಸಾಲ ಮಾಡಬೇಕಾಯಿತು. ಪೆಲೆಟ್ ಯಾರಿಗೆ ತಲುಗಿದೆಯೋ ಅವರಿಗೆ ಮಾತ್ರ ಘಾಸಿ ಮಾಡುವುದಲ್ಲದೆ, ಇಡೀ ಕುಟುಂಬದ ಬದುಕನ್ನು ನರಕ ಸದೃಶವಾಗಿಸುತ್ತದೆ. ಇದೀಗ ಆತ ಎನಿಸಿಕೊಂಡಂಥ ಬದುಕು ಸಾಗಿಸುವ ಸ್ಥಿತಿಯಲ್ಲಿ ಇಲ್ಲ’’ ಎಂದು ಸುಲ್ತಾನ್ ಹತಾಶರಾಗಿ ನುಡಿಯುತ್ತಾರೆ.
ಪೆಲೆಟ್ ಗುಂಡು ತಗಲಿದ ನಾಲ್ಕು ತಿಂಗಳ ಬಳಿಕ ಕೂಡಾ ಜಹೂರ್ ಮನೆಯಲ್ಲೇ ಬಂಧಿ. ಎಡಗಣ್ಣು ಮಾತ್ರ ಸ್ವಲ್ಪಮಟ್ಟಿಗೆ ಕಾಣಿಸುತ್ತದೆ. ಶೇ.20ರಷ್ಟು ಮಾತ್ರ ದೃಷ್ಟಿ ಉಳಿದುಕೊಂಡಿದೆ.
ರಾಜ್ಯಶಾಸ್ತ್ರದಲ್ಲಿ ಅತೀವ ಆಸಕ್ತಿ ಹೊಂದಿದ್ದ ಜಹೂರ್, ಪ್ರತಿಭಟಿಸುವ ಹಕ್ಕನ್ನು ಜನರು ಹೇಗೆ ಶಾಂತಿಯುತವಾಗಿ ಬಳಸಬಹುದು ಎಂಬ ವಿಚಾರಗಳನ್ನೊಳಗೊಂಡ ಪುಸ್ತಕಗಳನ್ನು ಹೆಚ್ಚುಹೆಚ್ಚು ಓದುತ್ತಿದ್ದ. ಆದರೆ ಇಂಥ ಪರಿಕಲ್ಪನೆಗಳು ಕೇವಲ ಪುಸ್ತಕಗಳಿಗಷ್ಟೇ ಸೀಮಿತವಾಗಿದ್ದು, ವಾಸ್ತವ ಜಗತ್ತಿನಲ್ಲಿ, ಅದರಲ್ಲೂ ಮುಖ್ಯವಾಗಿ ಕಾಶ್ಮೀರದಲ್ಲಿ ಇದರ ಅನ್ವಯಿಕೆ ಅಸಾಧ್ಯ ಎನ್ನುವುದು ಆತನಿಗೆ ಮನದಟ್ಟಾಗಿದೆ.
‘‘ನನ್ನ ಭಾವನೆಗಳೇ ಇದೀಗ ಸತ್ತುಹೋಗಿವೆ. ನನ್ನೆಲ್ಲ ಕನಸುಗಳು ಮಣ್ಣುಪಾಲಾಗಿವೆ. 12ನೆ ತರಗತಿ ಪರೀಕ್ಷೆಗೂ ನಾನು ಹಾಜರಾಗಿಲ್ಲ. ಪೆಲೆಟ್ನಿಂದ ಜರ್ಜರಿತವಾಗಿರುವ ನನ್ನ ಬದುಕಿನಲ್ಲಿ ಬಲವನ್ನು ಮರಳಿ ಪಡೆಯಲು ನನ್ನ ಪೋಷಕರು ನೆರವಾಗುತ್ತಿದ್ದಾರೆ’’ ಎಂದು ಜಹೂರ್ ಹೇಳುತ್ತಾರೆ.
ಹೀಗೆ ಆ ದಿನವೇ ಬದುಕು ಛಿದ್ರಗೊಂಡ ಯುವಕ ಜಹೂರ್ ಮಾತ್ರ ಅಲ್ಲ; ಆತನ ಮನೆ ಪಕ್ಕದಲ್ಲೇ ಬೇಕರಿ ಇಟ್ಟುಕೊಂಡಿದ್ದ ಮನ್ಸೂರ್ ಅಹ್ಮದ್ (22) ಎಂಬ ಯುವಕನ ಕಥೆಯೂ ಇದಕ್ಕಿಂತ ಭಿನ್ನವಲ್ಲ. ಗ್ರಾಮದ ಮೇಲೆ ಸುರಿಯುತ್ತಿದ್ದ ಪೆಲೆಟ್ ಹಾಗೂ ಅಶ್ರುವಾಯು ಸೆಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತಿದ್ದ ವೇಳೆ ಮನ್ಸೂರ್ಗೆ ಗುಂಡು ತಾಗಿತು.
‘‘ನಾನು ಬೇಕರಿಯಲ್ಲಿದ್ದುಕೊಂಡೇ, ಪ್ರತಿಭಟನೆ ತೀವ್ರಸ್ವರೂಪ ಪಡೆಯುತ್ತಿರುವುದನ್ನು ನೋಡುತ್ತಿದ್ದೆ. ಹೊರಬಂದು ಬಾಗಿಲು ಎಳೆಯುತ್ತಿದ್ದೆ. ಇನ್ನೇನು ಬಾಗಿಲಿಗೆ ಬೀಗ ಹಾಕಬೇಕು ಎನ್ನುವಷ್ಟರಲ್ಲಿ, ಒಬ್ಬ ಪೊಲೀಸ್ ತನ್ನ ಪೆಲೆಟ್ ಬಂದೂಕನ್ನು ನನ್ನತ್ತ ಗುರಿ ಮಾಡಿದ್ದನ್ನು ಗಮನಿಸಿದೆ. ಕಣ್ಣು ತೆರೆಯುವಷ್ಟರಲ್ಲಿ ಪೆಲೆಟ್ ಗುಂಡಿನ ಮಳೆ ನನ್ನನ್ನು ಆಕ್ರಮಿಸಿತ್ತು’’ ಎಂದು ಮನ್ಸೂರ್ ವಿವರಿಸುತ್ತಾರೆ.
ಸ್ನೇಹಿತ ಜಹೂರ್ನಂತೆ ಈತನಿಗೂ ಎದೆಯ ಮೇಲೆ ಗುಂಡು ನಾಟಿತು. ಇದುವರೆಗೆ ಆತನ ಕಣ್ಣಿಗೆ ಎರಡು ಶಸ್ತ್ರಚಿಕಿತ್ಸೆಗಳಾಗಿವೆ. ಈ ತಿಂಗಳು ಮೂರನೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು.
‘‘ಐದು ತಿಂಗಳಿಂದ ನಾನು ಹಾಸಿಗೆ ಹಿಡಿದಿದ್ದೇನೆ. ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಐದು ತಿಂಗಳಿಂದ ಅಂಗಡಿ ಮುಚ್ಚಿದ್ದೇನೆ. ಇಡೀ ಕುಟುಂಬಕ್ಕೆ ನಾನೇ ಜೀವನಾಧಾರವಾಗಿದ್ದೆ. ಇದೀಗ ಕುಟುಂಬಕ್ಕಾಗಿ ಯಾರು ದುಡಿಯುತ್ತಾರೆ?’’ ಎನ್ನುವುದು ಅವರ ಪ್ರಶ್ನೆ.
ಮನ್ಸೂರ್ಗೆ ಗುಂಡು ತಗುಲಿದ ಬಳಿಕ ಅವರ ತಮ್ಮ, 9ನೆ ತರಗತಿ ವಿದ್ಯಾರ್ಥಿ ಶೆರಾಝ್ ಶಾಲೆ ಬಿಟ್ಟು, ಕುಟುಂಬಕ್ಕೆ ಆದಾಯ ಗಳಿಸಿಕೊಡುವ ಸಲುವಾಗಿ ಕೂಲಿ ಕೆಲಸಕ್ಕೆ ಇಳಿದಿದ್ದಾನೆ. ಕಾಶ್ಮೀರ ಕಣಿವೆ ಸಹಜ ಸ್ಥಿತಿಗೆ ಹೊರಳುತ್ತಿದ್ದು, ಜಹೂರ್ ಹಾಗೂ ಮನ್ಸೂರ್ ಪೆಲೆಟ್ನಿಂದ ಆಗಿರುವ ಘಾಸಿಯಿಂದ ಹೊರಬರುವ ಪ್ರಯತ್ನದಲ್ಲಿದ್ದಾರೆ. ಇವರು ಶ್ರೀನಗರದ ಎಸ್ಎಂಎಚ್ಎಸ್ ಆಸ್ಪತ್ರೆಯಲ್ಲಿ ಹದಿನೈದು ದಿನಗಳಿಗೊಮ್ಮೆ ಕಣ್ಣು ಪರೀಕ್ಷೆ ಮಾಡಿಸಿಕೊಳ್ಳುವ ಖಾಯಂ ಅತಿಥಿಗಳು.
‘‘ರಹ್ಮೂ ಮತ್ತು ಶ್ರೀನಗರ ನಡುವಿನ ಪ್ರಯಾಣಕ್ಕಷ್ಟೇ ಇದೀಗ ನಮ್ಮ ಬದುಕು ಸೀಮಿತವಾಗಿದೆ. ಉಳಿದೆಲ್ಲವೂ ನಮ್ಮ ಬಾಳಿಗೆ ಕತ್ತಲು’’ ಎಂದು ಹತಾಶೆಯಿಂದ ನುಡಿಯುತ್ತಾರೆ.
ಕೃಪೆ: m.yourstory.com