ಮಳೆ ಬಂದರೂ, ಬಾರದಿದ್ದರೂ ಮಾವು ಬೆಳೆಗಾರರಿಗೆ ಸಂಕಷ್ಟ
ವರುಣನ ಆರ್ಭಟ: ನೆಲಕಚ್ಚಿದ ಮಾವು
ಚಿಕ್ಕಮಗಳೂರು, ಜೂ.11: ಕಾಫಿನಾಡು ಚಿಕ್ಕಮಗಳೂರಲ್ಲಿ ಸುರಿದ ಮುಂಗಾರು ಪೂರ್ವ ಆಲಿಕಲ್ಲು ಮಳೆಗೆ ವರ್ಷ ಪೂರ್ತಿ ಬೆಳೆದ ಮಾವಿನ ಬೆಳೆ ಸಂಪೂರ್ಣ ನೆಲ ಕಚ್ಚಿತ್ತು. ಇದೀಗ ಮುಂಗಾರು ಮಳೆ ಅಬ್ಬರಕ್ಕೆ ಕೊಯ್ಲಿಗೆ ಬಂದಿರುವ ಮಾವಿನ ಫಸಲು ಸಂಪೂರ್ಣ ನೆಲದ ಪಾಲಾಗುತ್ತಿದೆ. ಜೊತೆಗೆ ಮಾವಿನ ದರ ಕುಸಿತದಿಂದ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ.
ಪ್ರಸಕ್ತ ವರ್ಷದ ಮಾವಿನ ತೋಟಗಳಲ್ಲಿ ಮರದ ತುಂಬೆಲ್ಲಾ ಮಾವಿನ ಫಸಲು ಕಣ್ಣು ಕುಕ್ಕುವಂತೆ ಕಾಣುತ್ತಿದ್ದವು. ನೆಲಕ್ಕೆ ತಾಕುತ್ತಿರುವ ಮಾವಿನ ಕಾಯಿಯನ್ನು ಕಂಡ ಬೆಳೆಗಾರ ಈ ಬಾರಿ ಉತ್ತಮ ಲಾಭದ ನೀರಿಕ್ಷೆಯಲ್ಲಿದ್ದರು. ಆದರೆ, ಆತನ ಆಸೆಗೆ ಮಳೆರಾಯ ತಣ್ಣಿರೆಚ್ಚಿತ್ತಿದ್ದಾನೆ. ಕಳೆದೊಂದು ತಿಂಗಳಿನಿಂದ ಜಿಲ್ಲೆಯ ತರೀಕೆರೆ, ಕಡೂರು, ಮೂಡಿಗೆರೆ, ಚಿಕ್ಕಮಗಳೂರುನಲ್ಲಿ ಸುರಿಯುತ್ತಿರುವ ಮಳೆಗೆ ಮರದ ತುಂಬೆಲ್ಲಾ ತುಂಬಿ ತುಳುಕಾಡುತ್ತಿದ್ದ ಮಾವಿನ ಕಾಯಿಗಳು ನೆಲಕಚ್ಚಿವೆ.
ಸಾವಿರಾರು ಎಕರೆಯಲ್ಲಿ ಬೆಳೆದ ಮಾವು ಬೆಳೆ ವರುಣನ ಆಭರ್ಟದಿಂದ ಶೇ.30ರಷ್ಟು ಇಳುವರಿ ಮಣ್ಣುಪಾಲಾಗಿದೆ. ಈ ಬಾರಿ ಮಾವಿನ ದರ ಕುಸಿತ ಕಂಡಿದ್ದು, ರೈತರಿಂದ ಮಾವಿನ ಚೇಣಿ ಪಡೆದಿದ್ದ ಮಧ್ಯವರ್ತಿಗಳು ಮಾವಿನ ತೋಟದ ಕಡೆ ತಿರುಗಿ ನೋಡುತ್ತಿಲ್ಲ. ಮಧ್ಯವರ್ತಿಗಳ ದಾರಿ ಕಾದು ಮರದಲ್ಲಿಯೇ ಹಣ್ಣು ಕೊಳೆಯುವಂತಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಸತತ ಬರಗಾಲದಿಂದ ಬೇಸತ್ತಿದ್ದ ರೈತರು, ಮಾವಿನ ಉತ್ತಮ ಇಳವರಿಗೆ ಬೇಕಾದ ಗೊಬ್ಬರ, ಕೀಟನಾಶಕ ಎಲ್ಲವನ್ನೂ ಒದಗಿಸಲಾಗಿತ್ತು. ಮಾವಿನ ಮರದಲ್ಲಿ ಉತ್ತಮ ಫಸಲನ್ನು ಕಂಡು ಲಾಭದ ನಿರೀಕ್ಷೆಯಲ್ಲಿದ್ದೆವು. ಆದರೆ, ಬೆಲೆ ಕುಸಿತ ಹಾಗೂ ವರುಣನ ಆಭರ್ಟದಿಂದ ನಮ್ಮ ಪರಿಸ್ಥಿತಿ ಈಗ ಶೋಚನೀಯವಾಗಿದೆ.
- ನಿರಂಜನ್,
ಮಾವಿನ ಬೆಳೆಗಾರ, ಕಡೂರು