ಮುಂಡುಗೋಡು ಕಾಡಿನ ನಡುವೆ ಅಡಗಿದೆ ಸಾಲಿಗ್ರಾಮ
ಮೂಡಿಗೆರೆ, ಜೂ.12: ಪ್ರಕೃತಿಯಲ್ಲಿ ಏನೆಲ್ಲಾ ವಿಚಿತ್ರಗಳು ಅಡಗಿವೆ ಎಂದು ಹೊರ ಪ್ರಪಂಚಕ್ಕೆ ಗೊತ್ತಿರುವುದಿಲ್ಲ. ಆ ವಿಚಿತ್ರ ಸತ್ಯಗಳು ಹೊರ ಜಗತ್ತಿಗೆ ಕಂಡಾಗ ಮಾತ್ರ ಅದರ ಮೂಲ ಹುಡುಕಲು ಯತ್ನಗಳು ನಡೆಯುತ್ತವೆ. ಆದರೆ ಕಾಡಿನ ನಡುವೆ ಇರುವ 1 ಸಾವಿರಕ್ಕೂ ಅಧಿಕ ವರ್ಷಗಳು ಕಳೆದಿರುವ ಸಾಲಿಗ್ರಾಮ ಮಲೆನಾಡಿಗರನ್ನು ಅಚ್ಚರಿಯನ್ನುಂಟು ಮಾಡಿದೆ.
ನಿತ್ಯ ಹರಿದ್ವರ್ಣದ ಕಾಡುಗಳ ನಡುವೆ ಎಂದೂ ಕಂಡರಿಯದಂತಾ, ಹಿಂದೆಂದೂ ಕೇಳರಿಯದಂತ ಭಾರೀ ಗಾತ್ರದ ಲಕ್ಷ್ಮೀನರಸಿಂಹ ಸ್ವಾಮಿಯ ಸಾಲಿಗ್ರಾಮವು ಶೋಲಾ ಕಾಡಿನ ನಡುವೆ ಪಾಳು ಬಿದ್ದ ಮನೆಯಲ್ಲಿ ಕಾಣಬಹುದು. ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಕೋಗಿಲೆ ಗ್ರಾಮದ ಮುಂಡುಗೂಡುವಿನಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಈ ಅಪರೂಪದ ಸಾಲಿಗ್ರಾಮವನ್ನು ವೀಕ್ಷಿಸಬಹುದು.
ಸ್ಥಳ ಪರಿಚಯ: ಒಂದು ಕಾಲದಲ್ಲಿ ಹೊಯ್ಸಳರ ಆಳ್ವಿಕೆಯಲ್ಲಿದ್ದ ಮಲೆನಾಡು ಒಂದು ಮೂಲೆ ಮೂಡಣ ದಿಕ್ಕಿನಲ್ಲಿರುವ ಈ ಊರಿಗೆ ಮೂಡಿಗೆರೆ ಎಂಬ ಹೆಸರು ಬಂದಿತು. ಅಂದಿನ ಕಾಲದಲ್ಲಿ ಬಣಕಲ್ ಹೋಬಳಿಯ ಕೋಗಿಲೆ-ಮುಂಡುಗೋಡು ಒಂದು ದೊಡ್ಡ ಊರಾಗಿತ್ತು. ಅಂದು ಈ ಮುಂಡುಗೂಡಿನಲ್ಲಿ ಬಹಳ ದೊಡ್ಡ ಜಾತ್ರೆ ನಡೆಯುತ್ತಿತ್ತು. ನಂತರ ಹೊಯ್ಸಳರು ತಮ್ಮ ಸಾಮ್ರಾಜ್ಯವನ್ನು ಹಾಸನ ಜಿಲ್ಲೆಯ ಬೇಲೂರು, ಹಳೇಬೀಡಿಗೆ ವಿಸ್ತರಿಸಿಕೊಂಡರು.
ನಂತರ ಕಾಲಕ್ರಮೇಣ ಮುಂಡುಗೂಡು ಬಾರಿ ಮಳೆ ಹಾಗೂ ಗಾಳಿಗೆ ಜನಜೀವನ ಅಸ್ತವ್ಯಸ್ತಗೊಂಡು ಕಾಡು ಪ್ರಾಣಿಗಳ ಹಾವಳಿಗೆ ತತ್ತರಿಸಿದ ಜನರು ಬೆಳೆದ ಬೆಳೆ ಕೈಗೆ ಬರುವ ಮೊದಲೇ ಪ್ರಾಣಿಗಳ ಪಾಲಾಗುತ್ತಿದ್ದ ಕಾರಣ ಇದರಿಂದ ಬೇಸತ್ತ ಜನರು ತಮ್ಮ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಊರಿಗೆ ಊರೇ ಗುಳೆ ಹೋದರು.
ಅಪರೂಪದ ಸಾಲಿಗ್ರಾಮಕ್ಕೆ ಸರಿಯಾದ ಗುಡಿಯ ವ್ಯವಸ್ಥೆ ಇಲ್ಲದೆ, ಸಾರ್ವಜನಿಕರಿಗೆ ಇದರ ಮಾಹಿತಿಯೇ ಇಲ್ಲದಂತಾಗಿದೆ. ಈ ಸಾಲಿಗ್ರಾಮ ಒಂದು ಕಾಲು ಅಡಿ ಸುತ್ತಳತೆ ಹೊಂದಿದ್ದು ಈ ಸಾಲಿಗ್ರಾಮದಲ್ಲಿ ಚಕ್ರ ಹೊಂದಿದೆ. ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಅಪರೂಪದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ಸಾಲಿಗ್ರಾಮಕ್ಕೆ ರೂಪುರೇಷೆ ನೀಡುವುದರೊಂದಿಗೆ ಸರಕಾರದ ವತಿಯಿಂದ ಒಂದು ದೇವಾಲಯ ಕಟ್ಟಿಸಿ ಪುಣ್ಯಕ್ಷೇತ್ರವನ್ನಾಗಿಸಬೇಕೆಂದು ಬಣಕಲ್ ಹೋಬಳಿಯ ಜನ ಆಗ್ರಹಿಸಿದ್ದಾರೆ.
ಇಷ್ಟು ದೊಡ್ಡ ಸಾಲಿಗ್ರಾಮ ಕರ್ನಾಟಕದಲ್ಲಿ ಎಲ್ಲೂ ಕಾಣಲು ಸಾಧ್ಯವಿಲ್ಲ. ಪಾಳು ಮನೆಯಿಂದ ಸ್ವಲ್ಪ ದೂರದಲ್ಲಿ ಸಾಲಿಗ್ರಾಮದ ಮೂಲಸ್ಥಾನ ಮತ್ತು ಹಿಂದಿನ ಕಾಲದ ಕಡೆಯುವ ಕಲ್ಲು ಹಾಗೂ ಜಾತ್ರೆ ನಡೆಯುತ್ತಿದ್ದ ಸ್ಥಳವು ಇಂದಿಗೂ ಕಾಣಲು ಸಾಧ್ಯ. ಮುಂಡುಗೋಡಿನಲ್ಲಿ ಕಬ್ಬಿಣದ ಅದಿರು ನಿಕ್ಷೇಪ ಮತ್ತು ಕಲ್ಲಿದ್ದಲು ಗಣಿ ಇದೆ.
ಬಾಲಕೃಷ್ಣ, ಭಾರತೀ ಬೈಲು, ಮೂಡಿಗೆರೆ.