ಭಕ್ತರ ಮಶ್ಕಿರಿ ಬೀದಿ ಮಕ್ಕಳಿಗೆ ಕಿರಿಕಿರಿ
ಸತ್ಯಕ್ಕೆ ಕನ್ನಡಿ
ಎಲ್ಲರಿಗೂ ಸ್ವಾತಂತ್ರ್ಯವಿದೆ. ಮೋದಿಭಕ್ತರು ಅವರ ಅಚ್ಚುಮೆಚ್ಚಿನ ನಾಯಕನನ್ನು ಎಷ್ಟಾದರೂ ಹಾಡಿ ಹೊಗಳಿಕೊಂಡು ಸಂಭ್ರಮಿಸಲಿ. ಆದರೆ ಈ ಪ್ರಕ್ರಿಯೆಯಲ್ಲಿ ಅದು ಇನ್ನಾರಿಗೋ ಕಿರಿಕಿರಿ ಯಾಗಬಾರದು. ಕಳೆದ 4 ವರ್ಷಗಳಲ್ಲಿ ಅವರು ಪ್ರತಿವರ್ಷ ಹರಿದುಬಿಡುವ ಒಂದು ಸರಪಳಿ (ಚೈನ್) ಪೋಸ್ಟ್ ಬೀದಿಮಕ್ಕಳ ಭವಿಷ್ಯಕ್ಕೆ ಕಲ್ಲಾಗುತ್ತ ಬಂದಿದೆ. ಈಗ ಜೂನ್ 15ರಿಂದ ಈ ಚೈನ್ ಸಂದೇಶ ಮತ್ತೆ ಹರಿದಾಡುತ್ತಿದೆ. ಅದನ್ನು ಮುಂದಕ್ಕೆ ಪಾಸ್ ಮಾಡುವವರ ಉದ್ದೇಶ ಒಳ್ಳೆಯದೇ ಇರಬಹುದು. ಆದರೆ ಅದರ ಪರಿಣಾಮ ಮಾತ್ರ ಬೀದಿಮಕ್ಕಳ ಮೇಲಾಗುತ್ತಿದೆ.
ಮಿಥ್ಯ: ‘‘ಭಾರತದಲ್ಲಿ ಸಂತೋಷದ ಸುದ್ದಿ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದಂತೆ- ನಿಮ್ಮ ಮನೆಯಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಪಾರ್ಟಿ ಇದ್ದಾಗ, ಆಹಾರ ಉಳಿದರೆ 1098(ಭಾರತದಲ್ಲಿ ಎಲ್ಲೇ ಇರಲಿ) ಮಕ್ಕಳ ಸಹಾಯವಾಣಿಗೆ ಕರೆ ಮಾಡಲು ಹಿಂಜರಿಯಬೇಡಿ. ಅವರು ಬಂದು ಆಹಾರ ಸಂಗ್ರಹಿಸಿ ಒಯ್ದು ಬೀದಿಮಕ್ಕಳಿಗೆ ಕೊಡುತ್ತಾರೆ. ಪ್ರಾರ್ಥಿಸುವ ತುಟಿಗಳಿಗಿಂತ ನೆರವು ನೀಡುವ ಕೈಗಳು ಉತ್ತಮ. ಈ ಚೈನ್ ಬ್ರೇಕ್ ಮಾಡಬೇಡಿ. ಈ ಸಂದೇಶವನ್ನು ಪಾಸ್ ಮಾಡಿ.’’
ಸತ್ಯ: ಇಲ್ಲಿ ಬೀದಿ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶ ಒಳ್ಳೆಯದೇ. ಆದರೆ ಕನಿಷ್ಠ ಸಾಮಾನ್ಯ ಪ್ರಜ್ಞೆ ಉಪಯೋಗಿಸದೇ ಮೋದಿಯ ಆರಾಧನೆಯಲ್ಲಿ ಮುಳುಗುವ ಈ ಭಕ್ತರಿಂದ ಅದೇ ಬೀದಿ ಮಕ್ಕಳಿಗೆ ತೊಂದರೆ ಆಗುತ್ತಿದೆ. ಇಂತಹ ಸಂದೇಶವನ್ನು ಇತರರಿಗೆ ಕಳಿಸುವ ಮೊದಲು 1098 ಫ್ರಿ ಟೋಲ್ ನಂಬರಿಗೆ ಕಾಲ್ ಮಾಡುವ ಪುರುಸೊತ್ತು ಮಾಡಿಕೊಳ್ಳಲು ಇವರು (ಇದರಲ್ಲಿ ಬಹಳಷ್ಟು ಜನ ಅಮಾಯಕರಿರಬಹುದು) ತಯಾರಿಲ್ಲ. 1098 ಚೈಲ್ಡ್ ಲೈಫ್ ಲೈನ್ ಇರುವುದು ಬೀದಿ ಮಕ್ಕಳು, ಕಾಣೆಯಾದ ಮಕ್ಕಳಿಗೆ ಸಹಾಯ ಮಾಡಲು. ಅಂತಹ ಮಕ್ಕಳಿಗೆ ಆಶ್ರಯ ಕಲ್ಪಿಸುವುದು ಅಥವಾ ಪೋಷಕರಿಗೆ ನೀಡುವುದು ಇದರ ಉದ್ದೇಶ. ಯಾವಾಗ ಇಂತಹವರು ಸಾಮಾಜಿಕ ಜಾಲತಾಣಗಳಲ್ಲಿ 1098 ನಂಬರ್ ಅನ್ನು ಆಹಾರ ಸಂಗ್ರಹಕ್ಕೆಂದು ನಮೂದಿಸಿದರೋ, ಆಗಿಂದ ಈ ನಂಬರ್ಗೆ ‘‘ನಮ್ಮಲ್ಲಿ ಆಹಾರ ಮಿಕ್ಕಿದೆ, ಬನ್ನಿ ಸಂಗ್ರಹಿಸಿ’’ ಎಂದು ಒಳ್ಳೆಯ ಮನಸ್ಸುಗಳು ಫೋನ್ ಮಾಡತೊಡಗಿವೆ. ‘‘ಹಾಗೆಲ್ಲ ಸಂಗ್ರಹಿಸಲು ನಮ್ಮಲ್ಲಿ ಮಾನವ ಸಂಪನ್ಮೂಲವಿಲ್ಲ. ಅಷ್ಟಕ್ಕೂ ಈ ಹೆಲ್ಪ್ಲೈನ್ ಉದ್ದೇಶ ಅದಲ್ಲವೇ ಅಲ್ಲ’’ ಎಂದು ಚೈಲ್ಡ್ ಹೆಲ್ಪ್ಲೈನ್ನವರಿಗೆ ಹೇಳಿ ಹೇಳಿ ಸಾಕಾಗಿದೆ. ಇಂತಹ ಕಾಲ್ಗಳಿಂದಾಗಿ, ಬೀದಿಮಕ್ಕಳ ಕುರಿತಾಗಿ ಬರುವ ಎಷ್ಟೋ ಕಾಲ್ಗಳನ್ನು ತಡೆ ಹಿಡಿದಂತಾಗಿದೆ. ಪದೇ ಪದೇ ಫೋನ್ ಎಂಗೇಜ್ ಬರುವುದರಿಂದ ನೈಜ ಕಳಕಳಿಯ ಜನರು ಕಾಲ್ ಮಾಡುವುದನ್ನು ನಿಲ್ಲಿಸಬಹುದು. ಇದರಿಂದ ನೂರಾರು ಬೀದಿಮಕ್ಕಳು ಮತ್ತು ಕಾಣೆಯಾದ ಮಕ್ಕಳಿಗೆ ನೆರವು ತಪ್ಪಿಹೋಗುತ್ತಿದೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.